Navagrahas

– ಡಾ| ಸತ್ಯನಾರಾಯಣ ಆಚಾರ್ಯ
ತರ್ಕಪ್ರಾಧ್ಯಾಪಕರು, ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು.

ನವ ಗ್ರಹಗಳು
ನವ ಗ್ರಹಗಳು

ಗ್ರಹ ಎ೦ದರೇನು ?

ಗ್ರಹ ಎ೦ಬುದು ಸಂಸ್ಕೃತದಲ್ಲಿ ಐದಾರು ಅರ್ಥಗಳುಳ್ಳ ಶಬ್ದ. “ಗ್ರಹ ಬಡಿದವನಂತೆ” ನಿಂತ ಅನ್ನುತ್ತೇವೆ. ಇಲ್ಲಿ ಗ್ರಹ ಎ೦ದರೆ ಭೂತ, ಪಿಶಾಚಿ ಎ೦ದರ್ಥ. ಶಕ್ತಿಗ್ರಹ, ಪಾಣಿಗ್ರಹ, ನೀಚಗ್ರಹ ಎ೦ಬಲ್ಲೆಲ್ಲಾ ಗ್ರಹ ಶಬ್ದವು ಬೇರೆ ಬೇರೆ ಅರ್ಥವನ್ನು ಹೇಳುತ್ತದೆ. “ನನಗೆ ಯಾಕೆ ಬೇಕಿತ್ತು ? ನನ್ನ ಗ್ರಹಚಾರ ಮಾರಾಯ” ಎನ್ನುತ್ತಾರೆ ಉಡುಪರು. ಗ್ರಹಗತಿ ಸರಿಯಿತ್ತು, ಅಪಘಾತದಿಂದ ಪಾರಾದೆ. ಅನ್ನುತ್ತಾರೆ ಕಲ್ಬುರ್ಗಿಯವರು. ಗ್ರಹಾನುಕೂಲಕ್ಕಾಗಿ ಗ್ರಹಯಜ್ಞವನ್ನು ಮಾಡಿ ಎನ್ನುತ್ತಾರೆ ಪುರೋಹಿತರು. ಇಲ್ಲಿ ಗ್ರಹವೆಂದರೆ ಆದಿತ್ಯಾದಿ ನವಗ್ರಹಗಳು.

ಗ್ರಹಣ ಎ೦ದರೆ ಹಿಡಿಯುವುದು ಎ೦ದರ್ಥ. ಯಾವುದು ಹಿದಿಯುವವು? ಅವು ಗ್ರಹಗಳು (ಗೃಹ್ಣಂತಿ ಇತಿ ಗ್ರಹಾಃ) ಸೂರ್ಯಚಂದ್ರರನ್ನು ಹಿಡಿಯುವ ರಾಹು ಕೇತುಗಳಷ್ಟೇ ಗ್ರಹರಲ್ಲ. ಆಯಾಯ ದಶಾಕಾಲದಲ್ಲಿ ನಮ್ಮನ್ನೆಲ್ಲ ಹಿಡಿಯುವ ಆದಿತ್ಯಾದಿಗಳೂ ಗ್ರಹರೇ.

ಈ ಗ್ರಹಗಳು ಸಕಲ ಪ್ರಾಣಿ ಜಾತದ ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತಿದ್ದು ತಮ್ಮ ಪ್ರಭಾವವನ್ನು ಬೀರುತ್ತವೆ. ಪರಮೋತ್ಕರ್ಷವನ್ನು ಹೊಂದಿ

ಗದ್ದುಗೆಯನ್ನು ಏರುವುದಕ್ಕೂ,ನೆಲಕಚ್ಚಿ ಪ್ರಪಾತಕ್ಕೆ ಬೀಳುವುದಕ್ಕೂ ಗ್ರಹದ ಸ್ಥಿತಿಗತಿಗಳು ಕಾರಣವಾಗುತ್ತವೆ. ಕಾರಿಕೆಯೊಂದು ಹೀಗೆ ಹೇಳುತ್ತದೆ.

ಗ್ರಹಾ ಗಾವೋ ನರೇಂದ್ರಶ್ಚ ಬ್ರಾಹ್ಮಣಶ್ಚ ವಿಶೇಷತಃ |
ಪೂಜಿತಾಃಪೂಜಯಿಷ್ಯಂತಿ ನಿರ್ದಹಂತ್ಯನಮಾನಿತಾ ||

ಗ್ರಹಗಳು ಗೋವುಗಳು ರಾಜ ಮತ್ತು ಬ್ರಾಹ್ಮಣರು ಈ ನಾಲ್ವರು ಪೂಜಿತರಾದರೆ ಸದಭೀಷ್ಟ ಪ್ರದರು, ಅವಮಾನಿತವಾದರೆ ಸರ್ವನಾಶಕರು ಎ೦ದೂ ಜ್ಯೋತಿಶ್ಶಾಸ್ತ್ರ

ಒಂಬತ್ತು ಗ್ರಹಗಳನ್ನು ಹೆಸರಿಸುತ್ತದೆ. ಸೂರ್ಯ, ಚಂದ್ರ, ಕುಜ, ಬುಧ, ಗುರು ಶುಕ್ರ, ಶನಿ, ರಾಹು, ಕೇತುಗಳೇ ಈ ನವಗ್ರಹರು.

ಮೊತ್ತಮೊದಲು ಈ ಗ್ರಹಗಳ ಸ್ವರೂಪವನ್ನು ಪರಿಚಯಿಸಿಕೊಳ್ಳೋಣ.

ಸೂರ್ಯ

ಸೂರ್ಯ
ಸೂರ್ಯ

“ಗ್ರಹಾಣಾಮಾದಿರಾದಿತ್ಯಃ” ಎಂಬಂತೆ ಈತ ಗ್ರಹಗಳಲ್ಲಿ ಮೊದಲಿಗೆ. ಆರೋಗ್ಯ ಜ್ಞಾನಗಳನ್ನು ದಯಪಾಲಿಸುವ ದೇವತೆ. ೨ ಕೈಯಲ್ಲಿ ಕೆಂಪು ಕಮಲಗಳು ಕೆಂಪು ರಥದಲ್ಲಿ ರಥಿಕ, ಅರುಣನೇ ಇವಗೆ ಸಾರಥಿ. ರಥಕ್ಕೆ ಕಟ್ಟಿರುವ ಕುದುರೆಗಳು ೭.

ಸೂಕ್ಷ್ಮಗುಂಗುರು ಕೂದಲುಗಳಿಂದ ಒಪ್ಪುವ ತಲೆ. ಆಕರ್ಷಕ ರೂಪ ಚೇತೋಹಾರಿಯಾದ ಗಂಭೀರ ಧ್ವನಿ. ಹೆಚ್ಚು ಎತ್ತರವಿಲ್ಲದ ನಿಲುವು. ಅನುಪಮ ಬುದ್ಧಿ ಚಾತುರ್ಯ. ಗೋರೋಚನದಂತೆ ಕೆಂಪು ಬೆರೆತ ಸುಂದರ ಕಣ್ಗಳು. ಧೈರ್ಯಶಾಲಿ ಪ್ರಚಂಡ. ಪಿತ್ತಪ್ರಕೃತಿ, ಉನ್ನತ ವ್ಯಕ್ತಿತ್ವ. ದೊಡ್ಡ ಕೈಗಳು. ಕೆಂಪುಉಡುಗೆ, ಇದು ರವಿಯನ್ನು ಶಾಸ್ತ್ರಾಕಾರರು ಗುರುತಿಸುವ ಬಗೆ.

ಆದಿತ್ಯ ಮಾರ್ತಾಂಡ ಭಾನು,ರವಿ,ದಿವಾಕರ,ಪ್ರಭಾಕರ ಇವು ಸೂರ್ಯನ ಪ್ರಸಿದ್ಧ ಹೆಸರುಗಳು. ಅದಿತಿ-ಕಶ್ಯಪರ ಮಗ. ಅದೊಂದು ದಿನ ಕಶ್ಯಪರು
ಮನೆಯಲ್ಲಿ ಇರಲಿಲ್ಲ. ಅದಿತಿದೇವಿ ತುಂಬು ಗರ್ಭಿಣಿ. ದೇವರ ಧ್ಯಾನದಲ್ಲಿದ್ದಾಳೆ. ಹೊರಗಿನಿಂದ ಭವತಿ ಭಿಕ್ಷಾಂಧೇಹಿ ಎಂಬ ಮಾಣವಕನ ಧ್ವನಿ. ಬುಧನು
ಭಿಕ್ಷೆಗಾಗಿ ಬಂದಿದ್ದ. ಕರೆದ ಕೂಡಲೇ ಭಿಕ್ಷೆಗೆ ಬರಲಿಲ್ಲವೆಂಬ ಸಿಟ್ಟು ಬುಧನಿಗೆ. ಏನು ಗರ್ಭಿಣಿ ಎಂಬ ಅಹಂಕಾರವೋ? ಗರ್ಭದಲ್ಲಿರುವ ಆ ಶಿಶು ಸತ್ತು ಹೋಗಲಿ
ಎಂಬ ಶಾಪವಾಗಿ ಆ ಸಿಟ್ಟು ಸ್ಪೋಟಗೊಂಡಿತು. ಆಕೆ ತತ್ತರಿಸಿ ಬಿದ್ದಳು. ಮೃತವಾದ ಅಂಡದಮ್ತೆ ಕಾಣಿಸಿದ ಆ ಶಿಶು ಶ್ರೀಹರಿಯ ಮಹಿಮೆಯಿಂದ ಕಶ್ಯಪರ
ಪ್ರಭಾವದಿಂದ ಸತ್ತು ಬದುಕಿತು. ಈ ಮಗುವೇ ಸೂರ್ಯ. ಆದ್ದರಿಂದಲೇ ಮಾರ್ತಾಂಡ ಆದಿತ್ಯ ಎಂಬುದು ಇವನ ಇನ್ನೊಂದು ಹೆಸರು. ಅದಿತಿಯ
ಮಗನೆಂಬ ಕಾರಣದಿಂದ ಮಾತ್ರ ಇವನಿಗೆ ಈ ಹೆಸರಲ್ಲ. ದಿನದಿನವೂ ಉದಯಿಸುತ್ತಾ ಅಸ್ತಮಿಸುತ್ತಾ ಜೀವಜಾತದ ೨೪ ಘಂಟೆಗಳ ಆಯುಷ್ಯವನ್ನು ಕಿತ್ತು
ಸಾಗುವುದರಿಂದ ಇವನಿಗೆ ಈ ಹೆಸರು. (ಆಯುರಾದಾಯ ಯಾತೀತಿ ಆದಿತ್ಯಃ)

ಮನುಷ್ಯ ಪ್ರತಿದಿನವೂ ಸೂರ್ಯಾಸ್ತದ ಸುಂದರ ಸಂಜೆಯನ್ನು ನೋಡಿ ಖುಶಿ ಪಡುತ್ತಾನೆ. ತನ್ನ ವಯಸ್ಸು ಒಂದು ದಿನ ಜಾಸ್ತಿಯಾಯಿತು ಎಂದೇ ಭಾವಿಸುತ್ತಾನೆ.
ಆಯುಷ್ಯದಲ್ಲಿ ಒಂದುದಿನ ಕಡಿಮೆಯಾಯಿತು ಎಂದು ಯೋಚಿಸುವುದಿಲ್ಲ. ಇದು ದುರಂತ.

ಸಂಜ್ಞಾ ಮತ್ತು ಛಾಯಾ ಸೂರ್ಯನ ಹೆಂಡಂದಿರು. ಸಂಜ್ಞೆಯಲ್ಲಿ ಯಮ ಯಮುನೆ ಮತ್ತು ಮನು ಹುಟ್ಟಿದರು. ಛಾಯಾ ದೇವಿಯಲ್ಲಿ ಸಾವರ್ಣಿ ಮತ್ತು ಶನೀಶ್ವರ ಎಂಬ ಈರ್ವರು ಹುಟ್ಟಿದರು. ಈ ಮನ್ವಂತರದ ಅಧಿಪತಿಯಾದ ವೈವಸ್ವತ ಮನು ಸೂರ್ಯನ ಪುತ್ರ. ಗ್ರಹಕೋಟಿಯಲ್ಲಿ ಭಯಂಕರನೆನಿಸಿದ ಶನಿಯೂ ರವಿಕುಮಾರ. ಕರ್ಣ ಸುಗ್ರೀವರು ಸೂರ್ಯಾಂಶ ಸಂಭೂತರು.

ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ರಿಹರಿಸಿಕೊಳ್ಳಬಹುದು.

ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |
ಧ್ವಾಂತಾರಿಂ ಸರ್ವಪಾಪಘ್ನಂ ಪ್ರಣತೋಸ್ಮಿ ದಿವಾಕರಮ್ ||

“ಕೆಂಪುದಾಸವಾಳ ಪುಷ್ಫದ ಕಾಂತಿ, ಕಶ್ಯಪನ ಮಗ, ಮಹಾತೇಜಸ್ವಿ, ಕತ್ತರ ಕಡುವೈರಿ, ಸರ್ವಪಾಪ ನಾಶಕ, ಇಂತಹಾ ದಿವಾಕರನನ್ನು ನಮಿಪೆ”.

ಚಂದ್ರ

ಚಂದ್ರ
ಚಂದ್ರ

ಚಂದ್ರ, ಶಶಿ, ಇಂದು, ಸೋಮ, ಶೀತಗು, ವಿಧು, ಇವು ಚಂದ್ರನ ಪ್ರಸಿದ್ಧ ಹೆಸರುಗಳು. ರಾಜಾನೌ ರವಿಶೀತಗು ಎಂಬಂತೆ ಸೂರ್ಯಚಂದ್ರರು ಗ್ರಹರಾಜರು. ಸೂರ್ಯ ಬೆಳಕು ಕೊಡುವ ದೇವನಾದರೆ, ತಾಪದಿಂದ ಬೆಂದವನಿಗೆ ತಂಪು ಕೊಡುವ ದೇವತೆ ಚಂದ್ರ. ಎರಡು ಕೈಗಳು. ಒಂದರಲ್ಲಿ ಗದೆ, ಇನ್ನೊಂದರಲ್ಲಿ ಅಭಯಮುದ್ರೆ. ಬಿಳಿಯ ಸ್ವಚ್ಛವಾದ ಬಟ್ಟೆಯನ್ನು ಧರಿಸಿದ ಸುಂದರವಾದ ಹತ್ತು ಕುದುರೆಗಳ ಬಿಳಿಯ ರಥದಲ್ಲಿ ಅಸೀನ.

ಸೌಮ್ಯ ಸ್ವಭಾವ, ಸುಂದರವಾದ ಕಣ್ಗಳು, ಮಧುರ ಮಾತು, ಬಿಳಿಬಣ್ಣ, ಬೊಜ್ಜು ಇಲ್ಲದ ಶರೀರ, ಮಧ್ಯವಯಸ್ಕ, ಎತ್ತರದ ನಿಲುವು. ಕಪ್ಪು ಗುಂಗುರು ಕೂದಲು, ಬುದ್ಧಿವಂತಿಕೆ, ಸಾತ್ವಿಕತೆ, ಬಹುಜನ ಮೈತ್ರಿ, ದಯಾಳುತ್ವ, ವೃದ್ಧಸ್ತ್ರೀ ಸಂಪರ್ಕ, ಚಾಂಚಲ್ಯ ಸೌಭಾಗ್ಯ, ಬಿಳಿಯ ಉಡುಗೆ ವು ಚಂದ್ರನ ಲಕ್ಷಣಗಳು.

ಚಂದ್ರ ಸಮುದ್ರ ಮಥನದ ಕಾಲದಲ್ಲಿ ಕ್ಷೀರೋದಾರ್ಣವ ಸಂಭೂತನೂ ಹೌದು. ಅತ್ರಿನೇತ್ರ ಸಮುದ್ಭವನೂ ಹೌದು. ಸ್ವಾಯಂಭುವ ಮನ್ವಂತರದಲ್ಲಿ ಅತ್ರಿ‌ಋಷಿಯ ಕಣ್ಣಿನಿಂದ ಜನಿಸಿದ. ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದಲ್ಲಿ ಧರ್ಮಪ್ರಜಾಪತಿಗೆ ವಸುಘ್ನಿಯಲ್ಲಿ ಹುಟ್ಟಿದ.

ದಕ್ಷಪ್ರಜಾಪತಿಯು ತನ್ನ ಅರವತ್ತು ಹೆಣ್ಣುಮಕ್ಕಳಲ್ಲಿ ಇಪ್ಪತ್ತೇಳು ಮಕ್ಕಳನ್ನು ಚಂದ್ರನಿಗೆ ಕೊಟ್ಟನು. ಈ ಚಂದ್ರಪತ್ನಿಯರೇ ಇಪ್ಪತ್ತೇಳು ನಕ್ಷತ್ರಗಳು. ಚಂದ್ರನು ರೋಹಿಣೀ ಎಂಬವಳಲ್ಲಿ ಮಾತ್ರ ಅತಿಶಯವಾಗಿ ಅನುರಕ್ತನಾದಾಗ ಉಳಿದವರು ಅಪ್ಪನಲ್ಲಿ ದೂರಿದರು. ಅಪ್ಪ ಅಳಿಯನಿಗೆ ಕ್ಷಯರೋಗ ಬರುವಂತೆ ಶಪಿಸಿದ.

ಚಂದ್ರ ವಿದ್ಯಾಭ್ಯಾಸಕ್ಕಾಗಿ ದೇವಗುರುವಾದ ಬೃಹಸ್ಪತಿಯಲ್ಲಿ ಹೋಗಿದ್ದ. ಸುಂದರಾಂಗನಾದ ಇವನನ್ನು ಗುರುಪತ್ನಿ ತಾರೆ ಮೋಹಿಸಿದಳು. ಆಕೆಯನ್ನು ಚಂದ್ರ
ಬಲಾತ್ಕಾರದಿಂದ ಅಪಹರಿಸಿ ಬುಧನನ್ನು ಪಡೆದ.

ಮತ್ತೊಮ್ಮೆ ಸಮುದ್ರಮಥನ ಕಾಲದಲ್ಲಿ ಸಾಗರದಿಂದ ಆವಿರ್ಭವಿಸಿದ ಚಂದ್ರನನ್ನು ಶಿವ ತಲೆಯಲ್ಲಿ ಧರಿಸಿ ಚಂದ್ರಶೇಖರನೆನಿಸಿದ.

ಅಮೃತಪಾನದ ಸಂದರ್ಭದಲ್ಲಿ ಈತ ಸೂರ್ಯನೊಂದಿಗೆ ಸೇರಿಕೊಂಡು ಮಾಯಾವಿಯಾದ ರಾಹುವನ್ನು ವಿಷ್ಣುವಿಗೆ ಸೂಚಿಸಿದ. ವಿಷ್ಣು ಚಕ್ರಾಯುಧದಿಂದ
ರಾಹುವಿನ ಶಿರವನ್ನು ಭೇದಿಸಿದರೂ ಅಮೃತದ ಪ್ರಭಾವದಿಂದ ರುಂಡವು ರಾಹುಗ್ರಹವೆನಿಸಿ ಚಂದ್ರಸೂರ್ಯರನ್ನು ದ್ವೇಶಿಸತೊಡಗಿತು.

ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು

ಪರಿಹರಿಸಿಕೊಳ್ಳಬಹುದು.
ದಧಿಶಂಖತುಷಾರಾಭಂ ಕ್ಷೀರೋದಾರ್ಣವ ಸಂಭವಮ್ |
ನಮಾಮಿ ಶಶಿನಂ ಭಕ್ತ್ಯಾ ಶಂಭೋರ್ಮುಕುಟಭೂಷಣಮ್ ||

ಮೊಸರು,ಶಂಖ, ಹಿಮಗಳಂತೆ ಶ್ವೇತಕಾಂತಿ, ಕ್ಷೀರಸಾಗರದಲ್ಲಿ ಉತ್ಪತ್ತಿ, ಶಿವನ ತಲೆಯ ಅಲಂಕಾರ. ಅಂತಹ ಶಶಾಂಕನಿಗೆ ಭಕ್ತಿಯಿಂದ ಬಾಗುವೆ.

ಅಂಗಾರಕ

ಅಂಗಾರಕ
ಅಂಗಾರಕ

ಮಂಗಲ ಅಂಗಾರಕನು ಕುಜ,ಭೌಮ ಎಂಬವು ಇವನ ಪ್ರಸಿದ್ಧ ಹೆಸರುಗಳು. ಕೆಂಪುಮಾಲೆಯನ್ನು ಧರಿಸಿರುವ ಕೆಂಪು ಬಟ್ಟೆಯ ಚತುರ್ಭುಜ ಈತ. ಗದಾಶಕ್ತಿ ಖಡ್ಗಶೂಲಗಳನ್ನು ಚತುರ್ಭುಜಗಳಲ್ಲಿ ಧರಿಸಿದ್ದಾನೆ.

ಕುಳ್ಳಶರೀರ, ಪಿಂಗಳ ಕಣ್ಗಳು ಮಸ್ತಾದ ಮೈಕಟ್ಟು, ಕಾಂತಿಯುಕ್ತ ಮುಖ, ಚಂಚಲ ಸ್ವಭಾವ, ಚುರುಕುತನ, ಶೌರ್ಯ, ಪ್ರತಿಭಾಪೂರ್ಣ ಮಾತುಗಳು,
ಗುಂಗುರು ಗುಂಗುರಾದ ಕೆಂಪು ಹರಳು, ತಾಮಸ ಸ್ವಭಾವ, ಸಾಹಸ ಪ್ರಿಯತೆ, ಹಿಂಸಾ ತತ್ಪರತೆ,ಕೆಂಪಾದ ಮೈಬಣ್ಣ, ಕೆಂಪು ಉಡುಗೆಗಳು ಇದು ಕುಜನ ಸ್ವರೂಪದ ಚಿತ್ರ.

ವಿಷ್ಣುವಿನ ಅನುಗ್ರಹದಿಂದ ಭೂದೇವಿಯಲ್ಲಿ ಹುಟ್ಟಿದ ಭೂಮಿಯ ಮಗನಾದ್ದರಿಂದಲೇ ಈತ ಭೌಮ. ಆದ್ದರಿಂದಲೇ ಕುಜ. ತಪಸ್ಸಿನಿಂದ ನವಗ್ರಹಗಳಲ್ಲಿ ಒಬ್ಬನಾದ ದಾಕ್ಷಾಯಿಣೀ ವಿರಹ ಪೀಡಿತನಾದ. ಶಿವನ ಮುಖದ ಬೆವರು ಭೂಮಿಯಲ್ಲಿ ಬಿದ್ದಾಗ ಅದರಿಂದ ಹುಟ್ಟಿದವನು ಕುಜನೆನ್ನುತ್ತದೆ ಬ್ರಹ್ಮವೈವರ್ತ ಪುರಣ.

ಈತ ಅಮಂಗಲ ಫಲಗಳನ್ನು ಸೂಚಿಸುವುದೇ ಹೆಚ್ಚು. ಆದರೂ ಇವನ ಹೆಸರು ಮಂಗಲ. ಇವನ ವಾರ ಮಂಗಲವಾರ. ಈ ದಿನ ಎಲ್ಲಾ ಶುಭಕೆಲಸಗಳಿಗೂ

ಅಯೋಗ್ಯವಾಗಿ ಅಮಂಗಲವಾರವೆನಿಸಿದೆ. ಹೆಚ್ಚೇಕೆ ಕ್ಷೌರಕ್ಕೂ ನಿಷಿದ್ಧವಾದ ದಿನವೆನಿಸಿದೆ. ಹೀಗಿದ್ದರೂ ಈ ಕುಜನಿಗೆ ಮಂಗಲನೆಂಬ ಹೆಸರೇಕೆ? ಕ್ಷೀರಸಾಗರ ಭಟ್ಟರ ಮನೆಯಲ್ಲಿ ಕಾಸಿನ ಮಜ್ಜಿಗೆ ಇಲ್ಲವೆಂಬ ಗಾದೆಯ ಮಾತಿನಂತಾಯಿತಲ್ಲ ?

ನಿಜ,ಮಂಗಲನೆಂದು ಹೇಳಿಯಾದರೂ ಆತ ಮಂಗಲಕರನಾಗಲಿ ಎನ್ನುವ ಪ್ರಾಚೀನ ಭಾವನೆಯೇ ಇದಕ್ಕೆ ಕಾರಣ. ಅರವತ್ತನೆಯ ಸಂವತ್ಸರ ಕ್ಷಯ. ಆದರೆ ಹಾಗೆನ್ನುತ್ತೇವೆಯೇ? ಅಕ್ಷಯನಾಮ ಸಂವತ್ಸರೇ ಎನ್ನುತೇವೆ. ಮನುಷ್ಯನಿಗೆ ಕೆಟ್ಟ ಶಬ್ದ ಹೇಳಲೂ ಹೆದರಿಕೆ!

ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನುಪರಿಹರಿಸಿಕೊಳ್ಳಬಹುದು.

ಧರಣೀ ಗರ್ಭಸಂಭೂತಂ ವಿದ್ಯುತ್ಕಾಂಚನಸನ್ನಿಭಮ್ |
ಕುಮಾರಂ ಶಕ್ತಿಹಸ್ತಂ ಚ ಮಂಗಲಂ ಪ್ರಣಮಾಮ್ಯಹಮ್ ||

ಭೂದೇವಿಯ ಗರ್ಭದಲ್ಲಿ ಜನಿಸಿದ, ಮಿಂಚಿನ ಮತ್ತು ಚಿನ್ನದ ಕಾಂತಿಯಂತೆ ಪಾಟಲಕಾಂತಿಯುಳ್ಳ ಹದಿನಾರು ವರುಷದ ಕುಮಾರನಾದ ಶಕ್ತ್ಯಾಯುಧಧರಿಯಾದ
ಮಂಗಲನಿಗೆ ನನ್ನ ನಮನ.

ಬುಧ

ಬುಧ
ಬುಧ

ಚಂದ್ರ (ಸೋಮ)ನ ಮಗನಾದ್ದರಿಂದ ಸೌಮ್ಯನೆಂದು ಪ್ರಸಿದ್ಧನಾಗಿದ್ದಾನೆ. ಹಸಿರು ಬಟ್ಟೆಯನ್ನುಟ್ಟ ಚತುರ್ಭುಜನು, ಖಡ್ಗ ಗುರಾಣಿ ಗದೆಗಳನ್ನು ವರಮುದ್ರೆಯನ್ನೂ ಧರಿಸಿರುವ ಸಿಂಹವಾಹನ.

ಕೆಂಪಾದ ವಿಶಾಲ ಕಣ್ಣುಗಳು,ಸ್ವಚ್ಛವಾದ ಒಳ್ಳೆಯ ಮಾತುಗಳು, ಗರಿಕೆಯ ದಲದಂತೆ ಹಸಿರು ಮೈಬಣ್ಣ, ರಾಜನ್ ಸ್ವಭಾವ, ಸದಾ ಸಂತೋಷ, ಮಧ್ಯಮರೂಪ, ನಿಪುಣ, ಉಡುಗೆ ನಡಿಗೆಗಳಿಂದ ಎಲ್ಲರಣ್ಣೂ ಅನುಕರಿಸುವ ಸ್ವಭಾವ, ಪಾಲಾಶದಂತೆ ಹಸಿರು ಬಣ್ಣದ ಉಡುಗೆಗಳು. ಇವು ಇವನಲ್ಲಿ ಕಾಣುವ ಲಕ್ಷಣಗಳು.

ದೇವಗುರು ಬೃಹಸ್ಪತಿಯ ಭಾರ್ಯೆ ತಾರೆ. ಮುಗ್ದ ಸ್ವಭಾವದ ಅಬಲೆ, ಸುಂದರಾಂಗಳಾದ ಚಂದ್ರ ಆಕೆಯನ್ನು ಬಲಾತ್ಕಾರದಿಂದ ಅಪಹರಿಸಿ ಪರಿಗ್ರಹಿಸಿದ.ಬ್ರಹ್ಮನ ಆದೇಶದ ಮೇರೆಗೆ ಚಂದ್ರ ತಾರೆಯನ್ನು ಬಿಟ್ಟುಕೊಟ್ಟ. ಗರ್ಭಿಣಿಯಾಗಿದ್ದ ಆಕೆಗೆ ಬೃಹಸ್ಪತಿ ಹೇಳಿದ “ಬೇರೆಯವರಿಂದ ಧರಿಸಿದ ಗರ್ಭವನ್ನು ತ್ಯಜಿಸು, ಲ್ಲವಾದರೆ ಸುಟ್ಟುಬಿಡುತ್ತೇನೆ.” ತಾರೆ ನಾಚಿಕೆಯಿಂದ ಗರ್ಭವನ್ನು ತ್ಯಜಿಸಿದಳು. ಬಂಗಾ೪ರದ ಬಣ್ಣದ ಸುಂದರ ಮಗು ಜನಿಸಿತು. ಒಡನೆಯೇ ಬೃಹಸ್ಪತಿಯ ಮನಸ್ಸು ಬದಲಾಯಿತು. ಇದು ನನ್ನ ಮಗು ಎಂದ ಬೃಹಸ್ಪತಿ. “ಅಲ್ಲ ನನ್ನದು ಎಂದ ಚಂದ್ರ.

ವಿವಾದ ಮುಗಿಲು ಮುಟ್ಟಿತ್ತು. ಋಷಿಮುನಿಗಳು ತರೆಯಲ್ಲಿ ಕೇಳಿದರು. “ಸತ್ಯಹೇಳು” ಎಂದು.ನಾಚಿಕೆಯಿಂದ ತಲೆತಗ್ಗಿಸಿದ ಆಕೆ ಬಾಯಿ ಬಿಡಲಿಲ್ಲ. ಆಗ ತಾನೇ ಹುಟ್ಟಿದ ಮಗು ಆರ್ಭಟಿಸಿತು. “ಛೀ ದುರಾಚಾರೇ! ತೆರೆಯ ಹಿಂದೆ ಮಾಡಿದ ಆತ್ಮಘಾತುಕತನವನ್ನು ಮರೆಮಾಚುವೆಯೇಕೆ?ನಾಚಿಕೆಯಾಗುವುದಿಲ್ಲವೇ! ಬಿಚ್ಚುಬಾಯಿ.” ಈತ ಚಂದ್ರನ ಮಗನೆಂದು ಸಾಬೀತಾಯಿತು. ಈ ಮಗುವನ್ನು ಚಂದ್ರನಿಗೆ ಒಪ್ಪಿಸಲಾಯಿತು.ಹುಟ್ಟಿನಿಂದಲೇ‌ಅಸಾಧಾರಣ ಬೌದ್ಧಿಕತೆಯನ್ನು ತೋರಿದ ಈ ಅಸಾಧಾರಣ ಜ್ಞಾನಿಗೆ “ಬುಧ”ನೆಂದು ಚತುರ್ಮುಖನೇ ಇಟ್ಟ ಹೆಸರು.

ಈ ಬುಧನಿಗೆ ಇಳೆಯೆಂಬವಳಲ್ಲಿ ಪುರೂರವನೆಂಬ ಮಗ ಜನಿಸಿದ.

ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ಪರಿಹರಿಸಿಕೊಳ್ಳಬಹುದು.

ಪ್ರಿಯಂಗು ಕಲಿಕಾಭಾಸಂ ರೂಪೇಣಾಪ್ರತಿಮಂ ಬುಧಮ್|
ಸೌಮ್ಯಂ ಸೌಮ್ಯಗುಣೋಪೇತಂ ನಮಾಮಿ ಶಶಿನಂದನಮ್ ||

ನವಣೆಯ ತೆನೆಯಂತೆ ಹಸಿರುಕಾಂತಿಯುಳ್ಳವ. ರೂಪದಲ್ಲಿ ಸಾಟಿಯಿಲ್ಲ, ಸೋಮನ (ಚಂದ್ರನ) ಮಗ. ಸೌಮ್ಯಸ್ವಭಾವ. ಅಪ್ಪನಾದ ಚಂದ್ರನ ಗುಣಗಳುಳ್ಳವ. ಚಂದ್ರನಿಗೆ ಮಿತ್ರಗ್ರಹವೆನಿಸಿ ಆನಂದಪ್ರದನಾದ ಬುಧನಿಗೆ ನನ್ನ ಪ್ರಣಾಮಗಳು.

ಗುರು

ಗುರು
ಗುರು

ದೇವತೆಗಳಿಗೆ ಗುರುವಾದ್ದರಿಂದ ಬೃಹಸ್ಪತಿಗೆ ಗುರುವೆಂದು ಹೆಸರು. ಉಳಿದ ಗ್ರಹಗಳಿಗಿಂತ ದೊಡ್ಡ ಗಾತ್ರದ ಗ್ರಹವಾದ್ದರಿಂದಲೂ ಗುರು. ಹಳದಿ ಬಟ್ಟೆಯನ್ನುಟ್ಟ ಈ ಬಂಗಾರದ ಬಣ್ಣದ ಚತುರ್ಭುಜ, ಕೈಗಳಲ್ಲಿ ದಂಡ, ವರಮುದ್ರೆ, ಜಪಮಾಲೆ, ಕಮಂಡಲುಗಳನ್ನು ಧರಿಸಿದ್ದಾನೆ.

ಪಿಂಗಲ ಬಣ್ಣದ ಕಣ್ಗಳು, ವೇದವಿದ್ಯಾಪ್ರವೀಣ, ಗಂಭೀರ ಹಾಗೂ ಸ್ಪಷ್ಟವಾದ ಸ್ವರ ಪುಟಕ್ಕಿಟ್ಟ ಬಂಗಾರದಂತೆ ಹೊಳೆಯುವ ಮೈಬಣ್ಣ, ಉಬ್ಬಿದ ವಿಶಾಲವದ ಎದೆ, ಗಿಡ್ಡ ಶರೀರ, ಧಾರ್ಮಿಕ, ವಿನಯಶೀಲ, ನಿಪುಣ, ಸ್ಥಿರವಗಿ ನೆಟ್ಟ ದೃಷ್ಟಿಯುಳ್ಳವ, ಸಾಹಸಶೀಲ, ಪೀತವಸ್ತ್ರಧಾರಿ- ಇವು ಗುರುವಿನ ಸ್ವರೂಪ.

ಆಂಗೀರಸ ಹರ್ಷಿಯ ಮಗ. ಪತ್ನಿಯಾದ ತಾರೆಯಲ್ಲಿ ಇವನಿಗೆ ಸ್ವಿಷ್ಣಕೃತ್, ವಡವಾಗ್ನಿ ಮೊದಲಾದ ಆರುಜನ ಮಕ್ಕಳು. ಏಳನೆಯವಳು ಮಗಳು ಸ್ವಾಹಾ. ಕಚನೂ ಇವನ ಮಗ.

ಅಸುರನನ್ನು ಸೋಲಿಸಿ ದೇವತೆಗಳನ್ನು ರಕ್ಷಿಸುವುದರಲ್ಲಿ ಈತನದೇ ದೊಡ್ಡಪಾತ್ರ. ಶುಕ್ರಾಚಾರ್ಯರು ಧೂಮವ್ರತವೆಂಬ ತಪಸ್ಸಿನಲ್ಲಿದ್ದಾಗ ತಾನು ಶುಕ್ರನ ವೇಷದಿಂದ ರಾಕ್ಷಸರಾಜನಲ್ಲಿಗೆ ಹೋಗಿ ನಾಸ್ತಿಕ್ಯವನ್ನು ಬೋಧಿಸಿದ. ಇದರ ಫಲವಾಗಿ ರಾಕ್ಷಸಕುಲ ತಪಸ್ಸು ಮುಗಿಸಿದ ಶುಕ್ರನಿಂದ ಶಾಪಗ್ರಸ್ತವಾಯಿತು.

ದೈತ್ಯ ನಾಶಕ್ಕಾಗಿ ಸರಸ್ವತೀ ತೀರದಲ್ಲಿ ಬೃಹಸ್ಪತ್ಯಾಚಾರ್ಯರ್ಯರು ಮಹಾಯಾಗವೊಂದನ್ನು ಆಚರಿಸಿದ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖವಿದೆ.ದೇವಗುರುವಾದ ಈತ ಸ್ವಾಭಿಮಾನಿ. ಅವಮಾನ ಅಗೌರವಗಳನ್ನು ಸಹಿಸಲಾರ. ಅದೊಂದು ದಿನ ದೇವಸಭೆಗೆ ಗುರುಗಳು ಆಗಮಿಸಿದಾಗ ದೇವೆಂದ್ರ ಎದ್ದು ನಿಲ್ಲಲಿಲ್ಲ. ಗುರುವಿಗೆ ಸಹನೆಯಾಗಲಿಲ್ಲ. ಯಾವ ಮಾತೂ ಆಡದೆ ಜಾಗ ಖಾಲಿ ಮಾಡಿದರು. ಬೃಹಸ್ಪತ್ಯಾಚಾರ್ಯರು ಎಲ್ಲಿ ಹೋದರೆಂದು ಯಾರಿಗೂ ತಿಳಿಯಲಿಲ್ಲ. ಪುರೋಹಿತರ ಮಂತ್ರಬಲವಿಲ್ಲದ ದೇವಗಣ ಸುಲಭವಾಗಿ ಅಸುರರಿಗೆ ಸೋತಿತು.

ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ಪರಿಹರಿಸಿಕೊಳ್ಳಬಹುದು.

ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಮ್ |
ವಂದ್ಯಂ ಚ ತ್ರಿಷು ಲೋಕೇಷು ಪ್ರಣಮಾಮಿ ಬೃಹಸ್ಪತಿಮ್ ||

ದೇವತೆಗಳಿಗೂ ಋಷಿಗಳಿಗೂ ಗುರುವಾದ ಬಂಗಾರದ ಕಾಂತಿಯುಳ್ಳ, ತ್ರಿಲೋಕದಲ್ಲೂ ವಂದ್ಯರಾದ ಬೃಹಸ್ಪತ್ಯಾಚಾರ್ಯರನ್ನು ನಮಿಪೆ.

ಶುಕ್ರ

ಶುಕ್ರ
ಶುಕ್ರ

ಬಿಳಿಯ ಬಟ್ಟೆಯನ್ನು ಧರಿಸಿದ ಬಿಳಿ ಶರೀರದ ದೈತ್ಯ ಮಂತ್ರಿ. ನಾಲ್ಕು ಕೈಗಳಲ್ಲಿ ದಂಡ, ವರಮುದ್ರೆ, ಕಮಂಡಲು, ಜಪಮಾಲೆಯನ್ನು ಧರಿಸಿರುವ ತಪಸ್ವಿ, ಶಾಸ್ತ್ರಾಸ್ತ್ರ ಕೋವಿದ.

ಆಜಾನುಬಾಹು, ಸುಂದರ ಚಾರುವೃತ್ತ ತೊಡೆಗಳು, ಆಕರ್ಷಕ ಮುಖಕಾಂತಿ, ಮನಸೆಳೆಯುವ ಕೇಶರಾಶಿ, ಕಾಮುಕತೆ, ರಾಜಸ ಪ್ರಕೃತಿ, ಕ್ರೀಡಾತತ್ಪರ, ಬುದ್ಧಿವಂತ, ವಿಶಾಲನೇತ್ರ, ಸ್ಥೂಲಭುಜ, ಶುಭ್ರವರ್ಣದ ಬಟ್ಟೆ ಇವು ಶುಕ್ರನ ಲಕ್ಷಣಗಳು.

ಭೃಗು ಮಹರ್ಷಿಯ ಮಗ, ತಾಯಿ ಪುಲೋಮೆ. ಸಹೋದರ ಚ್ಯವನ. ಪತ್ನಿ ಊರ್ಜಸ್ವತಿ, ಮಗಳು ದೇವಯಾನಿ. ಕಂಡಾಮರ್ಕರು ಮಕ್ಕಳು.

ದೈತ್ಯರ ರಕ್ಷಣೆಗಾಗಿ ಬದ್ಧಕಚ್ಛಣದ ಬ್ರಾಹ್ಮಣ. ತಲೆಕೆಳಗೆ ಮಾಡಿ ಧೂಮಪಾನಮಾಡುತ್ತಾ ಸಹಸ್ರವರ್ಷ ತಪಸ್ಸನ್ನಾಚರಿಸಿ ಮೃತಸಂಜೀವಿನೀ ವಿದ್ಯೆಯನ್ನು ಪಡೆದ
ಹಠವಾದಿ. ಆ ಮೂಲಕ ದೇವಾಸುರ ಯುದ್ಧದಲ್ಲಿ ಮಡಿದ ರಾಕ್ಷಸನ್ನು ಪುನಃ ಜೀವಿಸುವಂತೆ ಮಾಡಿದ. ಬಲಿಯು ಕೇಳದಿದ್ದಾಗ ಗಿಂಡಿಯ ತೂತಿನಲ್ಲಿ ಕುಳಿತು ಜಲಧರೆಯನ್ನು ತಡೆದ. ದರ್ಭೆಯಿಂದ ಚುಚ್ಚಿಸಿಕೊಂಡು ಒಕ್ಕಣ್ಣನಾದ.

ಶಿವನ ಶುಕ್ರ (ವೀರ್ಯ) ದಿಂದ ಜನಿಸಿದುದರಿಂದ ಶುಕ್ರನೆನಿಸಿದನೆಂಬ ಕಥೆ ಶಾಂತಿಪರ್ವದಲ್ಲಿದೆ. ಮಿಥುನಭಾವದಲ್ಲಿ ಪ್ರಸಿದ್ಧನಾದ ಅರ್ಧನಾರೀಶ್ವರನ ಶುಕ್ರದಿಂದ ಜನಿಸಿದುದರಿಂದಲೇ ಈತನಿಗೆ ಕಾಮುಕತೆ, ಶುಕ್ರಪ್ರಾಧಾನ್ಯಗಳು ಸ್ವರೂಪಗುಣವಾಗಿದೆ.

ಆದ್ದರಿಂದಲೇ ಈತ ಸ್ತ್ರೀಕಾರಕ.

ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ಪರಿಹರಿಸಿಕೊಳ್ಳಬಹುದು.

ಹಿಮಕುಂದಮೃಣಾಲಾಭಂ ದೈತ್ಯಾನಾಂ ಪರಮಂ ಗುರುಮ್ |
ಸರ್ವಶಾಸ್ತ್ರಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್ ||

ಹಿಮ, ದುಂಡುಮಲ್ಲಿಗೆ, ತಾವರೆದಂಟುಗಳಂತೆ ಬಿಳಿಯ ಕಾಂತಿಯುಳ್ಳ, ದೈತ್ಯರ ಪರಮಗುರುವಾದ, ಸರ್ವಶಾಸ್ತ್ರಗಳನ್ನು ಪ್ರವಚನ ಮಾದಬಲ್ಲ
ಭೃಗುಗೋತ್ರೋತ್ಪನ್ನರಾದ ಶುಕ್ರಾಚಾರ್ಯರನ್ನು ವಂದಿಪೆ.

ಶನಿ

ಶನಿ
ಶನಿ

ನಾಲ್ಕು ಕೈಗಳಲ್ಲಿ ಬಿಲ್ಲು, ಬಾಣ, ಚರ್ಮ, ಶೂಲಗಳನ್ನು ಧರಿಸಿದ ಗೃಧ್ರವಾಹನ. ಇಂದ್ರನೀಲದಂತೆ ನೀಲಿ ಮೈಬಣ್ಣದ ಈತ ಮಂದಗತಿ. ಮಂದ, ಸ್ಥಿರ, ಶನೈಶ್ಚರ, ರವಿಸುತ ಇವು ಈತನ ಪ್ರಸಿದ್ಧನಾಮಗಳು.

ಕಪ್ಪು ಎನಿಸಿದ ಕಡುನೀಲಿ ಬಣ್ಣದ ಶರೀರ, ಗುಳಿ ಬಿದ್ದ ಕಣ್ಣುಗಳು,ಚಾಡಿ ಹೇಳಿ ಜಗಳ ಹುಟ್ಟಿಸುವ ಸ್ವಭಾವ, ಕೋಲುದೇಹ, ಆಲಸ್ಯ, ಮೂರ್ಖತೆ, ದೊಡ್ಡ ಉಗುರು-ಹಲ್ಲುಗಳು, ರೋಮ ಮುಚ್ಚಿದ ಶರೀರ, ತಾಮಸ ಪ್ರಕೃತಿ, ಅತಿಕೋಪ, ಮುಪ್ಪು, ಅತಿನೀಲಿ ಬಣ್ಣದ ಉಡುಗೆಗಳು. ಇದು ಶಾಸ್ತ್ರಜ್ಞರು ಶನಿಯನ್ನು ಕಂಡ ರೀತಿ.

ಸೂರ್ಯನಿಗೆ ಛಾಯಾದೇವಿಯಲ್ಲಿ ಹುಟ್ಟಿದ ಎರಡನೇ ಮಗ ಶನೈಶ್ಚರ. ಅಣ್ಣ ಸಾವರ್ಣಿ ಮನು. ತಂಗಿ ತಪತಿ. ಶನೈಶ್ಚರ ಮಹಾತ್ಮೆಯನ್ನು ಹೇಳುತ್ತಾ ಕುಳಿತರೆ ರಾತ್ರಿ ಕಳೆದು ಬೆಳಗಾದೀತು. ಈತ ಗ್ರಹಗಳಲ್ಲಿ ತೀಕ್ಷ್ಣಗ್ರಹ, ಸ್ವಾಭಿಮಾನಿ

ಮೇಷಾದಿರಾಶಿಗಳಲ್ಲಿ ಬಹಳ ನಿಧಾನವಾಗಿ ಸಂಚರಿಸುವುದರಿಂದ ಇವರ್ನಿಗೆ “ಶನೈಶ್ಚರ” ಎಂದು ಹೆಸರು. “ಶನೈಃ”ಎಂದರೆ ಮೇಲ್ಭಾಗ ಎಂದರ್ಥ.ಚಂದ್ರನು ಎರಡೂ ಕಾಲುದಿನಗಳಲ್ಲಿ ಒಂದು ರಾಶಿಯನ್ನು ಕ್ರಮಿಸುತ್ತಾನೆ. ಸೂರ್ಯ ಒಂದು ತಿಂಗಳಲ್ಲಿ ಒಂದು ರಾಶಿಯಿಂದ ಸಂಕ್ರಮಿಸುತ್ತಾನೆ. ಆದರೆ ಶನಿ ಎರಡೂವರೆ ವರ್ಷಗಳ ತನಕ ಒಂದು ರಾಶಿಯಿಂದ ಕದಲುವುದಿಲ್ಲ. ಶ್ಥಿರವಾಗಿ ಕುಳಿತು ಬಿಡುತ್ತಾನೆ. ಆದ್ದರಿಂದಲೇ ಈತ ಸ್ಥಿರ. ಮಂದನಾಗಿ ಸಂಚರಿಸುವುದರಿಂದ ಮಂದ. ಶನೈಃ ಶನೈಃ ಸಾಗುವುದರಿಂದ ಶನಿ.

ಗ್ರಹಗಳು ಗೋಚಾರರೀತ್ಯಾ ರಾಶಿಗಳಲ್ಲಿರುವ ಕಾಲಮಾನ

ರವಿ 1 ತಿಂಗಳು
ಚಂದ್ರ 1 ದಿನ
ಕುಜ 2 1/2 ತಿಂಗಳು
ಬುಧ ೧ ತಿಂಗಳು
ಗ್ರು ೧೨ ತಿಂಗಳು
ಶುಕ್ರ ೧ ತಿಂಗಳು
ಶನಿ ೩೦ ತಿಂಗಳು
ರಾಹು – ಕೇತು ೨೦ ತಿಂಗಳು

“ಶಂ ನಯತೀತಿ ಶನಿಃ” ಎಂಬ ವಿವಕ್ಷೆಯಿಂದ ಶನಿ ಎಂದರೆ ಮಂಗಳ ಸುಖಕಾರಕ ಎಂದರ್ಥ. ಏನಿದು? ಹಗಲು ಇರುವ ಕಾಯಿ ಹಾಗಲಕಾಯಿ ಎನ್ನುವಷ್ಟು ಅಬದ್ಧವಾದ ಅರ್ಥವನ್ನು ಮಾಡುತ್ತಿರುವಿರಲ್ಲಾ! ಕಾಟ ಕೊಡುವ ಶನಿ ಸುಖಕಾರಕನೇ? ಎನ್ನಬೇಡಿ. ಕಷ್ಟ ಕೊಡುವುದೂ ಸುಖಕ್ಕಾಗಿಯೇ. ಶನಿಗ್ರಹದ ಕಾಟವಿದೆಯೆಂದು ತಿಳಿದಾಗ ದೇವರ ನೆನಪಾಗುತ್ತದೆ. ಪೂಜೆ, ಜಪಗಳು ಆರಂಭವಾಗುತದೆ. “ಸಂಕಟಬಂದಾಗ ವೆಂಕಟರಮಣ” ಎಲ್ಲವೇ? ಪರಮಾತ್ಮನೂ ಹೇಳುತ್ತಾನೆ “ಯಸ್ಯಾನುಗ್ರಮಿಚ್ಛಾಮಿ ತಸ್ಯ ವಿತ್ತಂ ಹರಾಮ್ಯಹಮ್” ಒಬ್ಬನನ್ನು ಮೇಲೆತ್ತಬೇಕೆಂದು ಬಯಸಿದರೆ ಅವನಿಗೆ ಕಾಟ ಕೊಡಲಾರಂಭಿಸುತ್ತೇನೆ. ಶನಿಯ ಕಾಟ ಕಹಿಯಾದ ಔಷಧಿಯಂತೆ ಪರಿಣಾಮದಲ್ಲಿ ಅಮೃತೋಪಸಮವಾದ ಸುಖಕ್ಕಾಗಿ.

ಏಳುವರೆ ಶನಿ :

ಈ ಶನಿ ತಾನು ಒಂದು ರಾಶಿಯಲ್ಲಿರುವ ಎರಡೂವರೆ ವರ್ಷದಲ್ಲಿ ಆ ರಾಶಿಯೇ ಜನ್ಮರಾಶಿಯಾಗಿ ಉಳ್ಳಜನರನ್ನು ಕಾಡುತ್ತಾನೆ. ಆ ರಾಶಿಯಲ್ಲಿದ್ದಾಗ ಮಾತ್ರವಲ್ಲ,
ಅದರ ಇಕ್ಕೆಲಗಳಲ್ಲಿರುವ ರಾಶಿಯಲ್ಲಿದ್ದಗಲೂ ಕಾದುತ್ತಾನೆ. ಹೀಗೆ ವೃಷಭರಾಶಿಯಲ್ಲಿರುವ ವ್ಯಕ್ತಿಗೆ ಮೇಷರಾಶಿಯಲ್ಲಿ ಶನಿಯಿದ್ದಾಗಲೇ ಶನಿಕಾಟ ಪ್ರಾರಂಭವಾಗುತ್ತದೆ. ಮಿಥುನರಾಶಿಯಲ್ಲಿ ಶನಿಚರಿಸುವ ಎರಡೂವರೆವರ್ಷಗಳ ಕಾಲವೂ ಇರುತ್ತದೆ. ಹೀಗೆ ೨ ಳಿ + ೨ ಳಿ + ೨ ಳಿ = ೭ಳಿ ವರ್ಷಗಳ
ದೀರ್ಘಕಾಲದ ಶನಿಸಂಚಾರವನ್ನು ಕನ್ನಡದಲ್ಲಿ ಏಳೂವರೆ ಶನಿ ಎಂದು ಕರೆದರೆ ಹಿಂದಿಯಲ್ಲಿ ಸಾಡೇಸಾತ್ ಎನ್ನುತ್ತಾರೆ. ಒಮ್ಮೆ ಏಳೂವರೆ ಶನಿ ಮುಗಿದು ಮತ್ತೆ
ಇಪ್ಪತ್ತೆರಡೂವರೆ ವರ್ಷಗಳಿಗೆ ಈ ೭ಳಿ ಶನಿ ಸಂಚಾರ ಪ್ರಾಪ್ತವಾಗುತ್ತದೆ.

ದೇವತಾರಾಧನೆ, ಗ್ರಹಪೂಜೆಗಳಿಂದ ವಿಮುಖರಾದ ಜನರಿಗೆ ಸಂಕಟವನ್ನು ಕೊಡುವವನಾದ್ದರಿಂದಲೇ ಶನಿಗ್ರಹ ಹೆಚ್ಚು ಪ್ರಚಾರದಲ್ಲಿದ್ದಾನೆ. ಶ್ರೀಮದ್ವಾದಿರಾಜ
ತೀರ್ಥರು ತಾವು ರಚಿಸಿದ ಮೂರು ಶ್ಲೋಕದ ನವಗ್ರಹಸ್ತೋತ್ರದಲ್ಲಿ ಶನಿಯು ಮಂಗಳವನ್ನು ಕೊಡಲಿ ಎಂದು ಸ್ತುತಿಸಿ ಕೊನೆಯ ಒಂದು ಶ್ಲೋಕದಲ್ಲಿ ಪ್ರತ್ಯೆಕವಾಗಿ
ಶನಿಯನ್ನು ಸ್ತುತಿಸಿದ್ದಾರೆ.

ಶನೇ ದಿನಮಣೇಃ ಸೂನೋ ಹ್ಯನೇಕಗುಣಸನ್ಮಣೇ |
ಅರಿಷ್ಟಂ ಹರ ಮೇsಭೀಷ್ಟಂ ಕುರು ಮಾಕುರು ಸಂಕಟಮ್ ||

ಉಳಿದ ಗ್ರಹರಿಗಿಲ್ಲದ ಮರ್ಯಾದೆ ಈ ರವಿಕುವರನಿಗೆ, ಪೆಟ್ಟು ಕೊಡುವವನೇ ದೊಡ್ಡಪ್ಪನಲ್ಲವೇ ?
ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ಪರಿಹರಿಸಿಕೊಳ್ಳಬಹುದು.

ನೀಲಾಂಜನಗಿರಿಪ್ರಖ್ಯಂ ರವಿಸೂನುಂ ಯಮಾಗ್ರಜಮ್ |
ಛಾಯಾಮಾರ್ತಾಂಡಸಂಭೂತಂ ಪ್ರಣಮಾಮಿ ಶನೈಶ್ಚರಮ್ ||

ಇಂದ್ರನೀಲಪರ್ವತದಂತೆ ನೀಲಕಾಂತಿಯುಳ್ಳ ರವಿಕುವರನಾದ, ಮಹಾತೇಜಸ್ವಿಯಾದ, ಛಾಯಾದೇವಿಯಲ್ಲಿ ಸೂರ್ಯನಿಗೆ ಜನಿಸಿದ, ಶನಿಶ್ಚರನಿಗೆ ಶಿರ
ಬಾಗುವೆ.

ರಾಹು

ರಾಹು
ರಾಹು

ನಾಲ್ಕು ಕೈಗಳು, ಖಡ್ಗ, ಚರ್ಮ, ಶೂಲ, ವರಮುದ್ರೆಗಳು ಕೈಗಳಲ್ಲಿ ವಿಕೃತವಾದ ಕರಾಳಮುಖ, ಕಪ್ಪು ಸಿಂಹಾಸನದಲ್ಲಿ ಎರಿರುವ ಕಪ್ಪು ಬಟ್ಟೆಯ ಭಯಂಕರಗ್ರಹ.

ಕಪ್ಪಾದ ಮೈಬಣ್ಣ, ದೀರ್ಘವಾದ ಕೂಲು ಶರೀರ. ವ್ರಣಾದಿಪೀಡೆ, ಪಾಷಡವಾದಿ, ಬಿಕ್ಕಳಿಕೆಯ ತೊದಲು ಮಾತು, ಸುಳ್ಳುಗಾರಿಕೆ, ಕಪಟ,ಕುಷ್ಠಾದಿರೋಗ, ಪರನಿಂದೆ, ಬುದ್ಧಿಹೀನತೆ, ಇವು ರಾಹುವಿನ ಲಕ್ಷಣ.

ದಕ್ಷನ ಮಗಳಾದ ಸಿಂಹಿಕೆಯ ಮಗ. ಅಮೃತಪ್ರಾಶನ ಸಂದರ್ಭದಲ್ಲಿ ವಿಷ್ಣು ಇವನ ಶಿಚ್ಛೇದವನ್ನು ಮಾಡಿದನು. ವೇಷ ಪಲ್ಲಟಿಸಿದ ರಾಹುವನ್ನು ವಿಷ್ಣುವಿಗೆ ಸೂಚಿಸಿದವರು ಸೂರ್ಯ ಚಂದ್ರರು. ಆದ್ವೇಷದಿಂದ ಈತ ಗ್ರಹಣಕಾಲದಲ್ಲಿ ಸೂರ್ಯ ಚಂದ್ರರನ್ನು ನುಂಗುತ್ತಾನೆ ಎಂಬುದು ಶಾಸ್ತ್ರ ಸಂಪ್ರದಾಯದ ಮಾತು.
ಚಂದ್ರ ಸೂರ್ಯನನ್ನು ಹಿಡಿಯುವುದರಿಂದಲೇ ಈತ ಗ್ರಹವೆನಿಸಿದ್ದಾನೆ. ಈ ಬಗ್ಗೆ ವಿಶೇಷ ವಿಷಯವನ್ನು ಮುಂದೆ ಹೇಳಲಾಗುತ್ತದೆ.

ಯಾರು ಈ ರಾಹು! ಕೇತು!

ವಿಷ್ಣುಚಕ್ರದಿಂದ ಕತ್ತರಿಸಲ್ಪಟ್ಟ ರಾಕ್ಷಸನ ರುಂಡಮುಂಡಗಳೇ ರಾಹುಕೇತುಗಳು. ಈ ರಾಹುಕೇತುಗಳೇ ಸೂರ್ಯ ಚಂದ್ರರನ್ನು ಹಿಡಿದು ಕಬಳಿಸುತ್ತಾ ದ್ವೇಷಸಾಧನೆ
ಮಾಡುತ್ತಾರೆ ಎಂಬುದು ಸಾಮಾನ್ಯ ಭಾವನೆ. ರಾಕ್ಷಸರಾದ ಈ ರಾಹು ಕೇತುಗಳು ಲೋಕಕ್ಕೆ ಉಪಕಾರ ಮಾಡುವ ದೇವತೆಗಳಲ್ಲ. ಹಿಂಸಾಪ್ರಿಯ ರಾಕ್ಷಸರು.
ಸ್ವಭಾವತಃ ಕ್ರೂರಿಗಳು. ಬ್ರಹ್ಮದ್ವೇಷಿಗಳು. ಇವರನ್ನು ಪೂಜಿಸಬಹುದೇ? ಒಂದು ವೇಳೆ ಪೂಜೆಯಿಂದ ಅಭೀಷ್ಟ ದೊರೆತರೂ ಇದು ತಾಮಸ ಪೂಜೆಯಾಗಿಲ್ಲವೇ? ತತ್ಕಾಲಕ್ಕೆ ಸತ್ಪಲ ದೊರೆತರೂ ಕೊನೆಯಲ್ಲಿ ಅನರ್ಥವಲ್ಲವೇ? ಲೋಕವನ್ನು ಕಾಪಾಡುವ ಸೂರ್ಯಚಂದ್ರರನ್ನು ಶಾಶ್ವತವಾಗಿ ದ್ವೇಷಿಸುವ
ಇವರು ಆಗಾಗ ಗ್ರಹಣ ಮಾಡಿ ಲೋಕಕ್ಕೆ ಅನಿಷ್ಟ ತರುವರು. ಇಂತಹ ರಾಹು ಕೇತುಗಳನ್ನು ಚಂದ್ರ ಸೂರ್ಯರ ಜೊತೆಗೆ ಪ್ರತಿಷ್ಠಾಪಿಸಿ ಪೂಜಿಸುವುದು ಎಷ್ಟೊಂದು ಅಬದ್ಧ!! ಬರಿಯ ರುಂಡವನ್ನೇ ರಾಹುವೆಂದು ಕರೆಯುವುದಾದರೆ “ಖಡ್ಗಚರ್ಮಧರಂ ಭೀಮಂ..” ಎಂಬುದಾಗಿ “ಕರಾಲವದನಃ ಖಡ್ಗಚರ್ಮಶೂಲೀ
ವರಪ್ರದಃ” ಎಂದೂ ಖಡ್ಗ ಚರ್ಮ, ಶೂಲ, ವರಮುದ್ರೆಗಳನ್ನು ಧರಿಸಿದ ಚತುರ್ಭುಜನನ್ನಾಗಿ ಸ್ತೋತ್ರಮಾಡುವುದು ಹೇಗೆ ಸರಿಯಾದೀತು? ಕತ್ತಿನಿಂದ ತರಿಯಲ್ಪಟ್ಟ ತಲೆಗೆ ಕೈಯಿದೆಯೇ? ಒಂದು ವೇಳೆ ಎದೆಯಿಂದಲೇ ಕತ್ತರಿಸಿರುವುದರಿಂದ ಕೈಯಿರುವುದು ಸರಿಯೆಂದು ವಾದಿಸುವುದಾದರೆ ಕೇತುವಿಗೆ ಕೈಯಿರಬಾರದು. “ಧೂಮ್ರಾಃ ದ್ವಿಬಾಹವಃ ಸರ್ವೇ” ಎಂದು ಕೇತುಗಳನ್ನು ದ್ವಿಬಾಹುಗಳೆಂದು ಸ್ತುತಿಸುತ್ತೇವೆ. ಅಲ್ಲದೆ ನಾಲ್ಕು ಕೈಗಳುಳ್ಳ ರಾಹು ರಾಕ್ಷಸನೆನಿಸುವುದು ಹೇಗೆ? ಯಾವ ರಾಕ್ಷಸನಿಗೆ ನಾಲ್ಕು ಕೈಗಳಿವೆ? ನಾಲ್ಕು ಕೈಗಳು ದೇವತಾಶಕ್ತಿಯ ದ್ಯೋತಕಗಳಲ್ಲವೇ?

ರಾಹುವಿನ ಕಬಂಧವೇ ಕೇತುವಾದರೆ ನೂರು ಜನ ಕೇತುಗಳೆನ್ನುವುದು ಎಂತು? “ಯೇ ಬ್ರಹ್ಮಪುತ್ರಾಃ ಬ್ರಹ್ಮಸಮಾನ ವಕ್ತ್ರಾಃ” ಎಂಬುದಾಗಿ ಕೇತುಗಳನ್ನು ಬ್ರಹ್ಮಪುತ್ರರು, ಬ್ರಹ್ಮನಂತಹ ಮುಖದವರು ಎಂದು ಸ್ತುತಿಸುವುದು ಹೇಗೆ ಸಾಧ್ಯ? ನವಗ್ರಹಪ್ರತಿಮೆಗಳ ಬಗ್ಗೆ ಹೇಳುತ್ತಾ ನವಗ್ರಹಕಾರಿಕೆಯಲ್ಲಿ “ಸರ್ವೇ ಕಿರೀಟಿನಃ ಕಾರ್ಯಾಃ” ಎಲ್ಲಾ ಗ್ರಹಗಳಿಗೂ ಕಿರೀಟವಿರುವಂತೆ ಪ್ರತಿಮೆಯನ್ನು ಮಾಡಬೇಕೆಂದು ಹೇಳುತ್ತದೆ. ತಲೆಯಿಲ್ಲದೆ ಕಿರೀಟವಿಡುವುದೆಂತು?

ಹೀಗೆ ಸಮಸ್ಯೆಗಳನ್ನು ಬಿಡಿಸುತ್ತಾ ಹೊರಟರೆ ಚಕ್ರವ್ಯೂಹಕ್ಕೆ ಹೊಕ್ಕ ಅನುಭವವಾಗುತ್ತದೆ. ಪೂರ್ವೋತ್ತರ ವಿರೋಧ ಬರದಂತೆ ಈ ಕಗ್ಗಂಟುಗಳನ್ನು ಬಿಡಿಸುವ ಬಗೆಯನ್ನು ವಿದ್ವಾಂಸರಾದ ಶ್ರೀಯುತ ಹಯವದನ ಪುರಾಣಿಕರು “ಅಭಿಷೇಕ” ಎಂಬ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾದ “ರಾಹು ಕೇತು” ಎಂಬ ತಮ್ಮ ಲೇಖನದಲ್ಲಿ ವಿಮರ್ಶಾತ್ಮಕವಾಗಿ ತಿಳಿಸಿದ್ದಾರೆ. ತಿಳಿಯಲೇ ಬೇಕಾದ ವಿಷಯ ಇಷ್ಟು “ಶಿರಸ್ತು ತಸ್ಯ ಗ್ರಹತಾಮವಾಪ ಸುರೈಃ ಸಮಾವಿಷ್ಯಮಥೋ ಸಬಾಹುಃ”
(ಮ.ಭಾ.ತಾ.) ಎಂಬ ಮಧ್ವಾಚಾರ್ಯರ ಮಾತಿನಂತೆ ದೇವತೆಗಳ ಸನ್ನಿಧಾನವುಳ್ಳ ರಾಹುವಿನ ತಲೆ ಗ್ರಹವೆನಿಸಿತು. ಇಲ್ಲಿ ರಾಹುವಿನ ತಲೆ ಅಧಿಷ್ಠಾನ ಮಾತ್ರ. ಅದರಲ್ಲಿ ದೇವತಾಸನ್ನಿಧಾನವಿದೆ. ಶಾಲಗ್ರಮದಲ್ಲಿ ಹರಿಸಾನ್ನಿಧ್ಯವಿರುವಂತೆ. ದುಂಡಗಿನ ಶಾಲಗ್ರಮದಲ್ಲಿ ಚತುರ್ಭುಜನಾದ ಹರಿಯಿರುವಂತೆ ದುಂದಗಿನ ರಾಹು ಶಿರದಲ್ಲಿ ಚತುರ್ಭುಜದೇವತೆಯನ್ನುಧ್ಯಾನಿಸುವುದು ಅಸಂಗತವಾಗದು. ಆ ದೇವತೆಯನ್ನು ಉದ್ದೇಶಿಸಿಯೇ ಪೂಜೆ, ಹೋಮಗಳನ್ನು ಮಾಡಬೇಕು.

“ರಾಹುಜ್ಯೇಷ್ಠಂ ಕೇತುಕಮ್” ಎಂಬ ವಚನಾನುಸಾರ ರಾಹುವಿನ ಶಿರದಲ್ಲೆ ಸನ್ನಿಹಿತರಾದ ಕೇತುಗಳೆಂಬ ನೂರು ದೇವತೆಗಳು ಕೇತುಗ್ರಹಕ್ಕೆ ಅರ್ಪಿಸಿದ ಪೂಜೆ
ಆಹುತಿಗಳನ್ನು ಸ್ವೀಕರಿಸುತ್ತಾರೆ. ಈ ದೇವತೆಗಳು ಬ್ರಹ್ಮಪುತ್ರರು, ಬ್ರಹ್ಮಸಮಾನವಕ್ತ್ರರು, ಬ್ರಹ್ಮಜ್ಞಾನಿಗಳು. ಇವರೇ ಕೇತುಗಳು. ರಾಹುವಿನ ಕಬಂಧವೇ ಕೇತುಗ್ರಹವೆನ್ನುವುದಕ್ಕೆ ಪ್ರಮಾಣವಿಲ್ಲ. ರಾಹು ಪುಚ್ಛವೆನಿಸಿದ ಅದೂ ಒಂದು ಕೇತುವೇ. ಸಾವಿರಾರು ಧೂಮಕೇತುಗಳಲ್ಲಿ ಅದೂ ಒಂದು ಕೇತುವೇ. ಸಾವಿರಾರು ಧೂಮಕೇತುಗಳಲ್ಲಿ ಅದೂ ಒಂದು. ಅದರೆ ಗ್ರಹವಲ್ಲ.

ಈ ರಾಹುಕೇತುಗಳ ಜೊತೆ ಸೂರ್ಯ, ಚಂದ್ರರನ್ನು ದ್ವೇಷಿಸುವ ರಾಹುವೆಂಬ ರಾಕ್ಷಸನೂ ಹರಿಯ ಅನುಗ್ರಹದಿಂದ ಇದ್ದಾನೆ. ತತ್ವವನ್ನು ತಿಳಿಯದೆ ಪೂಜಿಸಿದಲ್ಲಿ ಆ ಪೂಜೆ ರಾಕ್ಷಸನ ಪಾಲಾದೀತು. ತಿಳಿದು ಪೂಜಿಸಬೇಕು.

ಇನ್ನೊಂದು ದೃಷ್ಟಿಕೋನದಿಂದ ನೋಡುವುದಾದರೆ ರಾಹು-ಕೇತುಗಳು ರಾಶಿಚಕ್ರದ ಎರಡು ಬಿಂದುಗಳು. ರಾಶಿಚಕ್ರದ ಮಧ್ಯದಲ್ಲಿ ಗುರುತಿಸಬಹುದಾದ ಪರಸ್ಪರ
ವಿರುದ್ಧ ದಿಕ್ಕಿನಲ್ಲಿರುವ ಎರಡು ಕಪ್ಪು ಬಿಂದುಗಳು. ಭೂಮಿಗೆ ಉತ್ತರ ಧ್ರುವ ದಕ್ಷಿಣದ್ರುವಗಳಿರುವಂತೆ. ಆದ್ದರಿಂದಲೇ ರಾಶಿಚಕ್ರದಲ್ಲಿ ರಾಹು, ಕೇತುಗಳ ಮಧ್ಯೆ
ಸರಿಯಾಗಿ ಆರು ರಾಶಿಯ ಅಂತರವಿರುತ್ತದೆ. ಅಂದರೆ ಕೇತುವಿನಿಂದ ಏಳನೇ ರಾಶಿಯಲ್ಲಿ ರಾಹುವಿರುತ್ತಾನೆ. ಅವನಿಂದ ಏಲನೇ ಕೋಣೇಯಲ್ಲಿ ಕೇತುವಿರುತ್ತಾನೆ. ಉದಾಹರಣೆಗೆ ರಾಹು ಮೇಷದಲ್ಲಿದ್ದರೆ ಕೇತು ತುಲಾದಲ್ಲಿರುತ್ತಾನೆ. ರಾಹು ವೃಷಭಕ್ಕೆ ಚಲಿಸಿದ ಕ್ಷಣದಲ್ಲಿಯೇ ಕೇತು ವೃಶ್ಚಿಕಕ್ಕೆ ವಾಲಿರುತ್ತಾನೆ. ಗಡಿಯಾರದ ಮುಳ್ಳಿನ ತುದಿ ಹನ್ನೆರಡರಲ್ಲಿದ್ದಾಗ ಅದರ ಹಿಂತುದಿ ಅಲ್ಲಿರಲೇಬೇಕು. ಮುಂಬದಿ ಒಂದಕ್ಕೆ ಸಾಗಿದ ಕ್ಷಣದಲ್ಲಿಯೇ ಹಿಂತುದಿ ಏಳಕ್ಕೆ ವಾಲುತ್ತದೆ. ಹಾಗೆಯೇ ರಾಹುಕೇತುಗಳು ರಾಶಿಚಕ್ರದ ಹನ್ನೆರಡು ಬಿಂದುಗಳನ್ನು ಮಧ್ಯದಿಂದ ಭಾಗಿಸುವ ಮುಳ್ಳಿನ ಇಕ್ಕೆಲದ ಎರಡು ಬಿಂದುಗಳು. ರಾಶಿಚಕ್ರದಲ್ಲಿ ತಿರುಗುತ್ತಾ ಹುಣ್ಣಿಮೆ ಅಮಾವಾಸ್ಯೆಗಳಂದು ಚಂದ್ರ, ಸೂರ್ಯರು ರಾಹು, ಕೇತುಗಳಿರುವ ಸ್ಥಾನಕ್ಕೆ ಬಂದರೆ ಗ್ರಹಣವಾಗಿದೆಯೆಂದು ತಿಳಿಯಬೇಕು. ರಾಹುವನ್ನು ಕಪ್ಪುಬಣ್ಣದ ನೆರಳು, ಕತ್ತಲೆ ಎಂಬ ಭಾವದಿಂದಲೇ ಛಾಯಾಗ್ರಹ, ತಮಃ ಎಂದು ಕರೆಯಲಾಗುತ್ತದೆ.

ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ಪರಿಹರಿಸಿಕೊಳ್ಳಬಹುದು.

ಯೋ ವಿಷ್ಣುನೈವಾಮೃತಂ ಪೀಯಮಾನಂ ಶಿರಚ್ಛಿತ್ವಾಗ್ರಹಭಾವೇನಯುಕ್ತಃ |
ಯಶ್ಚಂದ್ರಸೂರ್ಯೌ ಗ್ರಸತೇ ಪರ್ವಕಾಲೇ ರಾಹುಂ ಸದಾ ಶರಣಮಹಂ ಪ್ರಪದ್ಯೇ ||

ಅಮೃತವನ್ನು ಕುಡಿಯುತ್ತಿರುವ ತಲೆಯನ್ನು ವಿಷ್ಣು ಕತ್ತರಿಸಿದ. (ದೇವತಾ ಸಾನಿಧ್ಯದಿಂದ) ಅದೆ ತಲೆ ಗ್ರಹವೆನಿಸಿತು. (ದೈತ್ಯಪ್ರವೃತ್ತಿಯಿಂದ) ಈ

ರಾಹು ಹುಣ್ಣಿಮೆ ಅಮಾವಾಸ್ಯೆಗಳಂದು ಚಂದ್ರ ಸೂರ್ಯರನ್ನು ನುಂಗುತ್ತಾನೆ. ಇಂತಹಾ ರಾಹುವನ್ನು ಸರ್ವದಾ ಮೊರೆಹೊಂದುತ್ತೇನೆ.

ಕೇತು

ಕೇತು
ಕೇತು

ಕೇತುಗಳು ನೂರು ಜನ. ಬ್ರಹ್ಮನ ಮಕ್ಕಳು. ಎರಡು ಕೈ, ವಿಚಿತ್ರಾಯುಧಧಾರಿಗಳು, ಗೃಧ್ರಾಸನಸ್ಥಿತರು

ಉಗ್ರವಾದ ಕೆಂಪು ಕಣ್ಣುಗಳು, ವಿಷಕಾರುವ ಮಾತು, ದೀರ್ಘಶರೀರ, ಶಸ್ತ್ರಧಾರಿ ಕೈಗಳು, ಆಚಾರಹೀನ, ಕಂದುಬಣ್ಣ, ದೂಮಸೇವನೆ, ಕಜ್ಜಿ, ಬೇನೆಗಳುಳ್ಳ ಶರೀರ, ಕ್ರೂರ ಸ್ವಭಾವ, ಇವು ಕೇತುವಿನ ಬಗ್ಗೆ ಶಾಸ್ತ್ರ ಕೊಡುವ ಮಾಹಿತಿ.

ಯಾರು ಈ ರಾಹು! ಕೇತು!

ವಿಷ್ಣುಚಕ್ರದಿಂದ ಕತ್ತರಿಸಲ್ಪಟ್ಟ ರಾಕ್ಷಸನ ರುಂಡಮುಂಡಗಳೇ ರಾಹುಕೇತುಗಳು. ಈ ರಾಹುಕೇತುಗಳೇ ಸೂರ್ಯ ಚಂದ್ರರನ್ನು ಹಿಡಿದು ಕಬಳಿಸುತ್ತಾ ದ್ವೇಷಸಾಧನೆ
ಮಾಡುತ್ತಾರೆ ಎಂಬುದು ಸಾಮಾನ್ಯ ಭಾವನೆ. ರಾಕ್ಷಸರಾದ ಈ ರಾಹು ಕೇತುಗಳು ಲೋಕಕ್ಕೆ ಉಪಕಾರ ಮಾಡುವ ದೇವತೆಗಳಲ್ಲ. ಹಿಂಸಾಪ್ರಿಯ ರಾಕ್ಷಸರು.
ಸ್ವಭಾವತಃ ಕ್ರೂರಿಗಳು. ಬ್ರಹ್ಮದ್ವೇಷಿಗಳು. ಇವರನ್ನು ಪೂಜಿಸಬಹುದೇ? ಒಂದು ವೇಳೆ ಪೂಜೆಯಿಂದ ಅಭೀಷ್ಟ ದೊರೆತರೂ ಇದು ತಾಮಸ ಪೂಜೆಯಾಗಿಲ್ಲವೇ? ತತ್ಕಾಲಕ್ಕೆ ಸತ್ಪಲ ದೊರೆತರೂ ಕೊನೆಯಲ್ಲಿ ಅನರ್ಥವಲ್ಲವೇ? ಲೋಕವನ್ನು ಕಾಪಾಡುವ ಸೂರ್ಯಚಂದ್ರರನ್ನು ಶಾಶ್ವತವಾಗಿ ದ್ವೇಷಿಸುವ
ಇವರು ಆಗಾಗ ಗ್ರಹಣ ಮಾಡಿ ಲೋಕಕ್ಕೆ ಅನಿಷ್ಟ ತರುವರು. ಇಂತಹ ರಾಹು ಕೇತುಗಳನ್ನು ಚಂದ್ರ ಸೂರ್ಯರ ಜೊತೆಗೆ ಪ್ರತಿಷ್ಠಾಪಿಸಿ ಪೂಜಿಸುವುದು ಎಷ್ಟೊಂದು ಅಬದ್ಧ!! ಬರಿಯ ರುಂಡವನ್ನೇ ರಾಹುವೆಂದು ಕರೆಯುವುದಾದರೆ “ಖಡ್ಗಚರ್ಮಧರಂ ಭೀಮಂ..” ಎಂಬುದಾಗಿ “ಕರಾಲವದನಃ ಖಡ್ಗಚರ್ಮಶೂಲೀ ವರಪ್ರದಃ” ಎಂದೂ ಖಡ್ಗ ಚರ್ಮ, ಶೂಲ, ವರಮುದ್ರೆಗಳನ್ನು ಧರಿಸಿದ ಚತುರ್ಭುಜನನ್ನಾಗಿ ಸ್ತೋತ್ರಮಾಡುವುದು ಹೇಗೆ ಸರಿಯಾದೀತು? ಕತ್ತಿನಿಂದ ತರಿಯಲ್ಪಟ್ಟ ತಲೆಗೆ ಕೈಯಿದೆಯೇ? ಒಂದು ವೇಳೆ ಎದೆಯಿಂದಲೇ ಕತ್ತರಿಸಿರುವುದರಿಂದ ಕೈಯಿರುವುದು ಸರಿಯೆಂದು ವಾದಿಸುವುದಾದರೆ ಕೇತುವಿಗೆ ಕೈಯಿರಬಾರದು. “ಧೂಮ್ರಾಃ ದ್ವಿಬಾಹವಃ ಸರ್ವೇ” ಎಂದು ಕೇತುಗಳನ್ನು ದ್ವಿಬಾಹುಗಳೆಂದು ಸ್ತುತಿಸುತ್ತೇವೆ. ಅಲ್ಲದೆ ನಾಲ್ಕು ಕೈಗಳುಳ್ಳ ರಾಹು ರಾಕ್ಷಸನೆನಿಸುವುದು ಹೇಗೆ? ಯಾವ ರಾಕ್ಷಸನಿಗೆ ನಾಲ್ಕು ಕೈಗಳಿವೆ? ನಾಲ್ಕು ಕೈಗಳು ದೇವತಾಶಕ್ತಿಯ ದ್ಯೋತಕಗಳಲ್ಲವೇ?

ರಾಹುವಿನ ಕಬಂಧವೇ ಕೇತುವಾದರೆ ನೂರು ಜನ ಕೇತುಗಳೆನ್ನುವುದು ಎಂತು? “ಯೇ ಬ್ರಹ್ಮಪುತ್ರಾಃ ಬ್ರಹ್ಮಸಮಾನ ವಕ್ತ್ರಾಃ” ಎಂಬುದಾಗಿ ಕೇತುಗಳನ್ನು ಬ್ರಹ್ಮಪುತ್ರರು, ಬ್ರಹ್ಮನಂತಹ ಮುಖದವರು ಎಂದು ಸ್ತುತಿಸುವುದು ಹೇಗೆ ಸಾಧ್ಯ? ನವಗ್ರಹಪ್ರತಿಮೆಗಳ ಬಗ್ಗೆ ಹೇಳುತ್ತಾ ನವಗ್ರಹಕಾರಿಕೆಯಲ್ಲಿ “ಸರ್ವೇ ಕಿರೀಟಿನಃ ಕಾರ್ಯಾಃ” ಎಲ್ಲಾ ಗ್ರಹಗಳಿಗೂ ಕಿರೀಟವಿರುವಂತೆ ಪ್ರತಿಮೆಯನ್ನು ಮಾಡಬೇಕೆಂದು ಹೇಳುತ್ತದೆ. ತಲೆಯಿಲ್ಲದೆ ಕಿರೀಟವಿಡುವುದೆಂತು?

ಹೀಗೆ ಸಮಸ್ಯೆಗಳನ್ನು ಬಿಡಿಸುತ್ತಾ ಹೊರಟರೆ ಚಕ್ರವ್ಯೂಹಕ್ಕೆ ಹೊಕ್ಕ ಅನುಭವವಾಗುತ್ತದೆ. ಪೂರ್ವೋತ್ತರ ವಿರೋಧ ಬರದಂತೆ ಈ ಕಗ್ಗಂಟುಗಳನ್ನು ಬಿಡಿಸುವ ಬಗೆಯನ್ನು ವಿದ್ವಾಂಸರಾದ ಶ್ರೀಯುತ ಹಯವದನ ಪುರಾಣಿಕರು “ಅಭಿಷೇಕ” ಎಂಬ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾದ “ರಾಹು ಕೇತು” ಎಂಬ ತಮ್ಮ ಲೇಖನದಲ್ಲಿ ವಿಮರ್ಶಾತ್ಮಕವಾಗಿ ತಿಳಿಸಿದ್ದಾರೆ. ತಿಳಿಯಲೇ ಬೇಕಾದ ವಿಷಯ ಇಷ್ಟು “ಶಿರಸ್ತು ತಸ್ಯ ಗ್ರಹತಾಮವಾಪ ಸುರೈಃ ಸಮಾವಿಷ್ಯಮಥೋ ಸಬಾಹುಃ”
(ಮ.ಭಾ.ತಾ.) ಎಂಬ ಮಧ್ವಾಚಾರ್ಯರ ಮಾತಿನಂತೆ ದೇವತೆಗಳ ಸನ್ನಿಧಾನವುಳ್ಳ ರಾಹುವಿನ ತಲೆ ಗ್ರಹವೆನಿಸಿತು. ಇಲ್ಲಿ ರಾಹುವಿನ ತಲೆ ಅಧಿಷ್ಠಾನ ಮಾತ್ರ. ಅದರಲ್ಲಿ ದೇವತಾಸನ್ನಿಧಾನವಿದೆ. ಶಾಲಗ್ರಮದಲ್ಲಿ ಹರಿಸಾನ್ನಿಧ್ಯವಿರುವಂತೆ. ದುಂಡಗಿನ ಶಾಲಗ್ರಮದಲ್ಲಿ ಚತುರ್ಭುಜನಾದ ಹರಿಯಿರುವಂತೆ ದುಂದಗಿನ ರಾಹು ಶಿರದಲ್ಲಿ ಚತುರ್ಭುಜದೇವತೆಯನ್ನುಧ್ಯಾನಿಸುವುದು ಅಸಂಗತವಾಗದು. ಆ ದೇವತೆಯನ್ನು ಉದ್ದೇಶಿಸಿಯೇ ಪೂಜೆ, ಹೋಮಗಳನ್ನು ಮಾಡಬೇಕು.

“ರಾಹುಜ್ಯೇಷ್ಠಂ ಕೇತುಕಮ್” ಎಂಬ ವಚನಾನುಸಾರ ರಾಹುವಿನ ಶಿರದಲ್ಲೆ ಸನ್ನಿಹಿತರಾದ ಕೇತುಗಳೆಂಬ ನೂರು ದೇವತೆಗಳು ಕೇತುಗ್ರಹಕ್ಕೆ ಅರ್ಪಿಸಿದ ಪೂಜೆ
ಆಹುತಿಗಳನ್ನು ಸ್ವೀಕರಿಸುತ್ತಾರೆ. ಈ ದೇವತೆಗಳು ಬ್ರಹ್ಮಪುತ್ರರು, ಬ್ರಹ್ಮಸಮಾನವಕ್ತ್ರರು, ಬ್ರಹ್ಮಜ್ಞಾನಿಗಳು. ಇವರೇ ಕೇತುಗಳು. ರಾಹುವಿನ ಕಬಂಧವೇ ಕೇತುಗ್ರಹವೆನ್ನುವುದಕ್ಕೆ ಪ್ರಮಾಣವಿಲ್ಲ. ರಾಹು ಪುಚ್ಛವೆನಿಸಿದ ಅದೂ ಒಂದು ಕೇತುವೇ. ಸಾವಿರಾರು ಧೂಮಕೇತುಗಳಲ್ಲಿ ಅದೂ ಒಂದು ಕೇತುವೇ. ಸಾವಿರಾರು ಧೂಮಕೇತುಗಳಲ್ಲಿ ಅದೂ ಒಂದು. ಅದರೆ ಗ್ರಹವಲ್ಲ.

ಈ ರಾಹುಕೇತುಗಳ ಜೊತೆ ಸೂರ್ಯ, ಚಂದ್ರರನ್ನು ದ್ವೇಷಿಸುವ ರಾಹುವೆಂಬ ರಾಕ್ಷಸನೂ ಹರಿಯ ಅನುಗ್ರಹದಿಂದ ಇದ್ದಾನೆ. ತತ್ವವನ್ನು ತಿಳಿಯದೆ ಪೂಜಿಸಿದಲ್ಲಿ
ಆ ಪೂಜೆ ರಾಕ್ಷಸನ ಪಾಲಾದೀತು. ತಿಳಿದು ಪೂಜಿಸಬೇಕು.

ಇನ್ನೊಂದು ದೃಷ್ಟಿಕೋನದಿಂದ ನೋಡುವುದಾದರೆ ರಾಹು-ಕೇತುಗಳು ರಾಶಿಚಕ್ರದ ಎರಡು ಬಿಂದುಗಳು. ರಾಶಿಚಕ್ರದ ಮಧ್ಯದಲ್ಲಿ ಗುರುತಿಸಬಹುದಾದ ಪರಸ್ಪರ
ವಿರುದ್ಧ ದಿಕ್ಕಿನಲ್ಲಿರುವ ಎರಡು ಕಪ್ಪು ಬಿಂದುಗಳು. ಭೂಮಿಗೆ ಉತ್ತರ ಧ್ರುವ ದಕ್ಷಿಣದ್ರುವಗಳಿರುವಂತೆ. ಆದ್ದರಿಂದಲೇ ರಾಶಿಚಕ್ರದಲ್ಲಿ ರಾಹು, ಕೇತುಗಳ ಮಧ್ಯೆ ಸರಿಯಾಗಿ ಆರು ರಾಶಿಯ ಅಂತರವಿರುತ್ತದೆ. ಅಂದರೆ ಕೇತುವಿನಿಂದ ಏಳನೇ ರಾಶಿಯಲ್ಲಿ ರಾಹುವಿರುತ್ತಾನೆ. ಅವನಿಂದ ಏಲನೇ ಕೋಣೇಯಲ್ಲಿ ಕೇತುವಿರುತ್ತಾನೆ. ಉದಾಹರಣೆಗೆ ರಾಹು ಮೇಷದಲ್ಲಿದ್ದರೆ ಕೇತು ತುಲಾದಲ್ಲಿರುತ್ತಾನೆ. ರಾಹು ವೃಷಭಕ್ಕೆ ಚಲಿಸಿದ ಕ್ಷಣದಲ್ಲಿಯೇ ಕೇತು ವೃಶ್ಚಿಕಕ್ಕೆ ವಾಲಿರುತ್ತಾನೆ. ಗಡಿಯಾರದ ಮುಳ್ಳಿನ ತುದಿ ಹನ್ನೆರಡರಲ್ಲಿದ್ದಾಗ ಅದರ ಹಿಂತುದಿ ಅಲ್ಲಿರಲೇಬೇಕು. ಮುಂಬದಿ ಒಂದಕ್ಕೆ ಸಾಗಿದ ಕ್ಷಣದಲ್ಲಿಯೇ ಹಿಂತುದಿ ಏಳಕ್ಕೆ ವಾಲುತ್ತದೆ. ಹಾಗೆಯೇ ರಾಹುಕೇತುಗಳು ರಾಶಿಚಕ್ರದ ಹನ್ನೆರಡು ಬಿಂದುಗಳನ್ನು ಮಧ್ಯದಿಂದ ಭಾಗಿಸುವ ಮುಳ್ಳಿನ ಇಕ್ಕೆಲದ ಎರಡು ಬಿಂದುಗಳು. ರಾಶಿಚಕ್ರದಲ್ಲಿ ತಿರುಗುತ್ತಾ ಹುಣ್ಣಿಮೆ ಅಮಾವಾಸ್ಯೆಗಳಂದು ಚಂದ್ರ, ಸೂರ್ಯರು ರಾಹು, ಕೇತುಗಳಿರುವ ಸ್ಥಾನಕ್ಕೆ ಬಂದರೆ ಗ್ರಹಣವಾಗಿದೆಯೆಂದು ತಿಳಿಯಬೇಕು. ರಾಹುವನ್ನು ಕಪ್ಪುಬಣ್ಣದ ನೆರಳು, ಕತ್ತಲೆ ಎಂಬ ಭಾವದಿಂದಲೇ ಛಾಯಾಗ್ರಹ, ತಮಃ ಎಂದು ಕರೆಯಲಾಗುತ್ತದೆ.

ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ಪರಿಹರಿಸಿಕೊಳ್ಳಬಹುದು.

ಯೇಬ್ರಹ್ಮಪುತ್ರಾಃ ಬ್ರಹ್ಮಸಮಾನ ವಕ್ತ್ರಾಃ
ಬ್ರಹ್ಮೋದೃವಾಃ ಬ್ರಹ್ಮವಿಧಃ ಕುಮಾರಾಃ |
ಬ್ರಹ್ಮೋತ್ತಮಾ ವರದಾ ಜಾಮದಗ್ನ್ಯಾಃ
ಕೇತೂನ್ ಸದಾ ಶರಣಮಹಂ ಪ್ರಪದ್ಯೇ ||

ಇವರು ಬ್ರಹ್ಮಪುತ್ರರು ಚತುರ್ಮುಖಬ್ರಹ್ಮನ ಮುಖದಂತೆ ಮುಖವುಳ್ಳವರು. ಬ್ರಾಹ್ಮಣವಂಶ ಸಂಜಾತರು. ಬ್ರಹ್ಮಜ್ಞಾನಿಗಳು. ಹದಿಹರಯದ ಕುಮಾರರು.

ಬ್ರಾಹ್ಮಣ ಶ್ರೇಷ್ಠರು. ವರಪ್ರದರು. ಜಮದ್ಗ್ನಿಗೋತ್ರೋತ್ಪನ್ನರು. ಇಂತಹ ಕೇತುಗಳನ್ನು ನಾನು ಸದಾ ಶರಣು ಹೋಗುತ್ತೇನೆ.

ನವಗ್ರಹಗಳಿಗೆ ಸಂಬಂಧಿಸಿದ ಧಾನ್ಯ, ಜನ್ಮಭೂಮಿ, ಸ್ಥಾನ, ಅಧಿದೇವತೆ, ರತ್ನ ಮೊದಲಾದವುಗಳ ಮಾಹಿತಿ
ಸೂರ್ಯಾದಿ ನವಗ್ರಹಗಳಿಗೆ ಸಂಬಂಧಿಸಿದ ಧಾನ್ಯ, ಜನ್ಮಭೂಮಿ, ಸ್ಥಾನ, ಅಧಿದೇವತೆ, ರತ್ನ ಮೊದಲಾದವುಗಳ ಮಾಹಿತಿಯನ್ನು ಈ ಕೆಳಗಿನ ಕೋಷ್ಟಕವು ನೀಡುತ್ತದೆ.

4 thoughts on “Navagrahas

  1. kindly let me know how to read the above table

    my date of birth is 31-1-1953
    name mahesh
    simha raashi

Leave a Reply

Your email address will not be published.