ಲಾಂಚನದ ಅರ್ಥ ಸೇಚನ
ಸಮಾನಾ ಹೃದಯಾನಿವಃ ಎನ್ನುವುದು ಈ ವೆಬ್ಸೈಟ್ನ ಧ್ಯೇಯ ವಾಕ್ಯ. ಇದು ಋಗ್ವೇದದ ಕೊನಯ ಭಾಗದಲ್ಲಿ ಬರುತ್ತದೆ. ನಮ್ಮ ಎಲ್ಲರ ಹೃದಯಗಳೂ ಒಂದೇ ರೀತಿ ಇರಲಿ, ಪರಸ್ಪರ ಕಚ್ಚಾಟ ಬೇಡ. ಒಳ್ಳೆಯ ರೀತಿಯಲ್ಲಿ ಜೀವನವನ್ನು ಸಾಗಿಸೋಣ ಎನ್ನುವುದು ಈ ಧ್ಯೇಯವಾಕ್ಯದ ಇಂಗಿತ.
ಪರಶುರಾಮ ನಮ್ಮ ಕ್ಷೇತ್ರವನ್ನು ನಿರ್ಮಾಣ ಮಾಡಿದ ದೇವರು. ಯಾವಾಗ ಸಮುದ್ರವು ತನ್ನ ಕೊರೆತದ ಮೂಲಕ ಭೂಮಿಯನ್ನು ಆಕ್ರಮಣ ಮಾಡಲು ಆರಂಭಿಸಿತೋ ಆಗ ಋಷಿ ಮುನಿಗಳು ಪರಶುರಾಮನಲ್ಲಿ ಭೂಮಿಯನ್ನು ರಕ್ಷಿಸುವಂತೆ ಪ್ರಾರ್ಥಿಸುತ್ತಾರೆ. ಆಗ ಪರಶುರಾಮನು ತನ್ನ ಪರಶುವನ್ನು ಬಿಸಾಡುವುದರ ಮೂಲಕ ಸಮುದ್ರಕ್ಕೆ ಹಿಂದೆ ಸರಿಯಲು ಆದೇಶ ನೀಡಿದ. ಸಮುದ್ರ ದಕ್ಷಿಣದ ಘಟ್ಟದಿಂದ ಭಾರೀ ದೂರಕ್ಕೆ ಸಾಗಿತು. ಹೀಗಾಗಿ ನಮ್ಮ ಕರಾವಳಿ ಭೂಮಿ ಪರಶುರಾಮನಿಂದ ರಕ್ಷಿತವಾದ ಭೂಮಿ. ಪರಶುರಾಮ ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ಇಲ್ಲಿ ಪರಶುರಾಮ ನಮ್ಮ ಭೂಮಿಯನ್ನು ಪ್ರತಿನಿಧಿಸುತ್ತಾನೆ.
ಮನುಜನ ಸಕಲ ಸಂಸಾರಿಕ ತೊಳಲಾಟಕ್ಕೆ ಕಾರಣ ಅವಿದ್ಯೆ, ಕಾಮ, ಕರ್ಮಗಳು. ಈ ದೇಹೀ ದೇಹವನ್ನೇ ತಾನೆಂದು ತಪ್ಪಾಗಿ ತಿಳಿದಿದೆ. ಈ ಅವಿದ್ಯೆಯಿಂದ ದೇಹದ ಬೇಕುಗಳೆಲ್ಲಾ ತನ್ನ ಬೇಕುಗಳಾದವು. ಇದೇ ಕಾಮ, ಕಾಮನೆ, ಕಾಮನೆಗಳ ಈಡೇರಿಕೆಗಾಗಿ ಕರ್ಮದಲ್ಲಿ ತೊಡಗಿದೆ. ಹಗಲು ದುಡಿದು ಸಾಕಾಗದಾದಾಗ ರಾತ್ರಿ ನಿದ್ದೆಗೆಟ್ಟು ದುಡಿದ. ಈ ಅವಿದ್ಯೆ, ಕಾಮ, ಕರ್ಮಗಳ ಸುಳಿಯಲ್ಲಿ ಸಿಲುಕಿ ಆನಂದತಾಣವೆನಿಸಿದ ದೇವನಿಂದ ದೂರಾದ. ಈ ಮೂರರ ನಂಟನ್ನು ಸರಿಸಿ ದೇವನ ಕಡೆ ಸಾಗುವುದು ಜೀವನದ ಪರಮೋದ್ದೇಶ. ಅದನ್ನು ಜ್ಞಾನಮುದ್ರೆ ಸಂಕೇತಿಸಿದೆ. ಕೈಯ ಐದು ಬೆರಳುಗಳು ಐದನ್ನು ಪ್ರತಿನಿಧಿಸಿವೆ. ಅಂಗುಷ್ಠವೇ ದೇವ. ತೋರುಬೆರಳು ಜೀವ. ಜೀವ ದೇವನಿಗಿಂತ ಬಲು ದೂರ. ಏಕೆಂದರೆ ಆತನ ಜೊತೆಗೆಗಿರುವ ಮೂರು ಬೆರಳುಗಳು ಅವಿದ್ಯೆ, ಕಾಮ, ಕರ್ಮಗಳು. ಅವುಗಳಿಂದ ಕಳಚಿಕೊಂಡು ಜೀವ ದೇವನೆಡೆಗೆ ಸಾಗಿ ದೇವನನ್ನು ಮುಟ್ಟುವ, ಜ್ಞಾನವೆಂಬ ಹಾಲು ಕರೆಯುವ ಮುದ್ರೆ ಜ್ಞಾನಮುದ್ರೆ. ಸೂರ್ಯಾಂತಸ್ಥಿತ ಪರಂಜ್ಯೋತಿಯಲ್ಲಿ ಸಕಲರ ಧೀಪ್ರಚೋದನೆಯನ್ನು ಪ್ರತಿದಿನ ಪ್ರಾರ್ಥಿಸುವ ವಿಪ್ರನ ಮನೋಭೂಮಿಕೆಯನ್ನು ಜ್ಞಾನಮುದ್ರೆ ಪ್ರತಿನಿಧಿಸುತ್ತದೆ. ಜ್ಞಾನಮುದ್ರೆಯ ಸುತ್ತ ಹರಡಿರುವ ವೃತ್ತ ಉದಯಿಸುವ ಸೂರ್ಯ.
ವಿಚಾರವು ಚೈತನ್ಯವಾದರೆ ಆಚಾರವು ದೇಹ. ಜ್ಞಾನಕ್ಕೆ ಸಂಸ್ಕೃತಿ ದೇಹ. ತುಳುನಾಡ ವಿಪ್ರರ ಸಂಸ್ಕೃತಿಯನ್ನು ಸಂಕೇತಿಸುತ್ತಿದೆ ಸಮುದ್ರತೀರದ ತಳಿರು, ಧಾನ್ಯದ ತೆನೆ.
ಕೃಷಿಪ್ರಧಾನ ಜೀವನವನ್ನು ನಡೆಸಿಕೊಂಡು ಬಂದ ಶಿವಳ್ಳಿ ಬ್ರಾಹ್ಮಣರು ಧಾನ್ಯಲಕ್ಷ್ಮಿಯನ್ನು ಅರಾಧಿಸುವ ವಿಧಿ “ಕೊರಳ್ ಕಟ್ಟು”ವ ಹಬ್ಬ. ಶರತ್ಕಾಲದ ಹತ್ತಾರು ಬಗೆಯ ಔಷಧೀ ವೃಕ್ಷಗಳ ಎಲೆಗಳೊಂದಿಗೆ ಭತ್ತದ ತೆನೆಯನ್ನಿಟ್ಟು ದಡ್ಡಲಮರದ ತೊಗಟೆಯ ನಾರಿನಿಂದ ಮನೆಯ ಪ್ರಧಾನದ್ವಾರದಿಂದಾರಂಭಿಸಿ ಎಲ್ಲಾ ಸ್ಥಳಗಳಲ್ಲೂ ಕಟ್ಟುವ ಈ ಸಂಸ್ಕೃತಿಯನ್ನು ಧಾನ್ಯದ ತೆನೆ ಪ್ರತಿನಿಧಿಸಿದೆ.
ಭೋರ್ಗರೆವ ಸಮುದ್ರ್ರ ಭಾರ್ಗವ ಕ್ಷೇತ್ರವೆಂಬ ಶಿವಳ್ಳಿ ವಿಪ್ರರ ಮೂಲದೇಶವನ್ನು ಸಂಕೇತಿಸಿದರೆ ನೀಲಿಯ ಆಕಾಶವು “ವಸುಧೈವ ಕುಟುಂಬಕಂ” ಎ೦ಬ ಹೃದಯ ವೈಶಾಲ್ಯದ ಸಂಕೇತ.
ಆಗಸ್ತು 13th, 2008 at 06:21:27
Very good concept. Keep it up